ಹತ್ತು ರೂಪಾಯಿಗೂ ಸಹ ದಿನಂಪ್ರತಿ ಕಷ್ಟಪಡುವ ಬಡ ಕುಟುಂಬಕ್ಕೆ ಇದ್ದಕ್ಕಿದ್ದ ಹಾಗೆ ಹದಿಮೂರು ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣ ಸಿಕ್ಕರೆ ಅವರ ಪರಿಸ್ಥಿತಿ ಏನಾಗಬೇಡ, ಇದೇ ಎಳೆಯನ್ನಿಟ್ಟುಕೊಂಡು ನಿರ್ದೇಶಕ ನರೇಂದ್ರಬಾಬು ಜೊತೆಗೊಂದು ಭಾವೈಕ್ಯತೆಯ ಸಂದೇಶವನ್ನು "13" ಚಿತ್ರದ ಮೂಲಕ ಜನರಿಗೆ ತಲುಪಿಸಿದ್ದಾರೆ.
ಕೊಟ್ಟಿಗೆ ಹಾರದಲ್ಲಿ ಸಣ್ಣ ಗುಜರಿ ಅಂಗಡಿ ಇಟ್ಟುಕೊಂಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಮೋಹನ್ ಕುಮಾರ್ (ರಾಘವೇಂದ್ರ ರಾಜ್ ಕುಮಾರ್ ) ಹಾಗೂ ಅದರ ಪಕ್ಕದಲ್ಲೇ ಟೀ ಅಂಗಡಿ ನಡೆಸುತ್ತಿರುವ ಸಾಯಿರಾಬಾನು(ಶೃತಿ) ಸತಿ ಪತಿಗಳಾಗಿ ಅನ್ಯೋನ್ಯತೆಯ ಜೀವನ ನಡೆಸುತ್ತಿರುತ್ತಾರೆ. ಒಮ್ಮೆ ಈ ದಂಪತಿಗೆ ಕಳ್ಳರು ತಂದು ಹುಲ್ಲಲ್ಲಿ ಬಚ್ಚಿಟ್ಟಿದ್ದ ಹದಿಮೂರು ಕೋಟಿ ಹಣ ಸಿಗುತ್ತದೆ. ಆ ಹಣ ಸಿಕ್ಕಮೇಲೆ ಅವರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪರರ ಹಣ ನಮಗೆ ಬೇಡ ಪೊಲೀಸರಿಗೆ ಒಪ್ಪಿಸೋಣ ಎಂದು ಗಂಡ ಹೇಳಿದರೂ ತಮ್ಮಕಷ್ಟಗಳನ್ನು ಪರಿಹರಿಸಿಕೊಳ್ಳಲು ದೇವರೇ ನೀಡಿದ ಅವಕಾಶ ಎಂದು ಸಾಯಿರಾ ಪರಿ ಪರಿಯಾಗಿ ಕೇಳಿದಾಗ, ಪತ್ನಿಯನ್ನು ನಿರಾಸೆಗೊಳಿಸಲಾಗದೆ ಒಪ್ಪಿಕೊಳ್ಳುತ್ತಾನೆ. ಆ ಹಣದ ಹಿಂದೆ ಬಿದ್ದ ಗ್ಯಾಂಗ್ ಜೊತೆಗೆ ಪೊಲೀಸ್ ಅಧಿಕಾರಿ(ಪ್ರಮೋದ್ ಶೆಟ್ಟ)ಯೂ ಶಾಮೀಲಾಗಿ ಬಚ್ಚಿಟ್ಟಿದ್ದ ಹಣ ತೆಗೆದುಕೊಳ್ಳಲು ಬಂದಾಗ ಹಣ ಮಾಯವಾಗಿರುತ್ತದೆ. ಅಣತಿ ದೂರದಲ್ಲೇ ಅಂಗಡಿ ಇಟ್ಟುಕೊಂಡಿದ್ದ ಮೋಹನ್ ಕುಮಾರ್ ಬಳಿಯೇ ಆ ಹಣ ಇರಬಹುದೆಂಬ ಅನುಮಾನ ಪೊಲೀಸ್ ಅಧಿಕಾರಿಗೆ ದಟ್ಟವಾಗುತ್ತದೆ.
ಮೋಹನ್ ಕುಮಾರ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸ್ ಅಧಿಕಾರಿಗೆ, ನಾದಿನಿಯ ಮದುವೆಯನ್ನು ಮೋಹನ್ ವಿಜೃಂಭಣೆಯಿಂದ ಮಾಡಿದಾಗ ಅನುಮಾನ ದಟ್ಟವಾಗುತ್ತದೆ. ಕ್ಷುಲ್ಲುಕ ಕಾರಣಕ್ಕೆ ಮೋಹನಕುಮಾರ್ ಗೆ ಠಾಣೆಗೆ ಕರೆಸಿ ಟಾರ್ಚರ್ ನೀಡುತ್ತಾನೆ. ಏನು ಮಾಡಿದರೂ ಹಣದ ಬಗ್ಗೆ ಬಾಯಿ ಬಿಡದ ಮೋಹನ್ ಕುಮಾರ್ ತನ್ನ ಚಾಣಾಕ್ಷತನದಿಂದಲೇ ಎಲ್ಲದರಿಂದ ಪಾರಾಗುತ್ತಾನೆ ಆ ಹಣದಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಪ್ರಯತ್ನದಲ್ಲಿರುವಾಗಲೇ ಚಿತ್ರ ಎಂಡ್ ಆಗುತ್ತದೆ.
ಮುಂದುವರೆದ ಭಾಗದಲ್ಲಿ ಆಹಣ ಏನಾಯ್ತು ಎಂಬ ಮಾಹಿತಿ ದೊರಕಬಹುದು. ಇಲ್ಲೀ ಶೃತಿ ಅವರ ಹಾವ ಭಾವ ಅಭಿನಯ ನಿಜಕ್ಕೂ ಅದ್ಭುತ, ಹಿರಿಯ ಕಲಾವಿದೆಯಾದರೂ ಜಿಂಕೆಯ ಹಾಗೆ ಹಾಡಿ ಕುಣಿದಿದ್ದಾರೆ. ಇನ್ನು ರಾಗಣ್ಣ ಅವರ ಬಗ್ಗೆ ಹೇಳುವ ಹಾಗೇ ಇಲ್ಲ, ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಒಂದು ದೊಡ್ಡ ಪಾತ್ರವನ್ನೇ ನಿರ್ವಹಿಸಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಅವರ ಪಾತ್ರವೇ ಚಿತ್ರದ ಹೈಲೈಟ್. ಕ್ಯಾಮೆರಾ ವರ್ಕ್, ಸಂಗೀತ ಚಿತ್ರಕಥೆಗೆ ಪೂರಕವಾಗಿ ಮೂಡಿಬಂದಿದೆ. ಸಂಭಾಷಣೆಗಳು ಅರ್ಥಗರ್ಭಿತವಾಗಿವೆ.ವೀಕೆಂಡ್ ನಲ್ಲಿ ಫ್ಯಾಮಿಲಿಯೊಂದಿಗೆ ವೀಕ್ಷಿಸಲು 13 ಅತ್ಯುತ್ತಮ ಆಯ್ಕೆ.